ರಸ್ತೆ ಅಪಘಾತ : ನಿರ್ವಹಣೆ ಅಧಿಕಾರಿಯ ಮೇಲೆ ಎಫ್.ಐ.ಆರ್ ಜಿಲ್ಲಾಧಿಕಾರಿ ಟಿ.ವೆಂಕಟೇಶ್

ರಾಜ್ಯ

ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ

ಸುಧಾರಣೆಗೆ ಮೂರು ತಿಂಗಳ ಗಡುವು

ರಸ್ತೆ ಅಪಘಾತ : ನಿರ್ವಹಣೆ ಅಧಿಕಾರಿಯ ಮೇಲೆ ಎಫ್.ಐ.ಆರ್

ಜಿಲ್ಲಾಧಿಕಾರಿ ಟಿ.ವೆಂಕಟೇಶ್

ಅವೈಜ್ಞಾನಿಕ ರಸ್ತೆ ನಿರ್ಮಾಣ ಹಾಗೂ ಬೇಜವಬ್ದಾರಿ ರಸ್ತೆ ನಿರ್ವಹಣೆಯಿಂದ ಅಪಘಾತಗಳು ಉಂಟಾಗಿ, ಸಾವು ನೋವು ಸಂಭವಿಸಿದರೆ, ರಸ್ತೆ ನಿರ್ವಹಣೆಯ ಹೊಣೆ ಹೊತ್ತ ಸಂಬಂಧಪಟ್ಟ ಅಧಿಕಾರಿ ಮೇಲೆ ಎಫ್.ಐ.ಆರ್ ದಾಖಲಿಸಲಾಗುವುದು. ನಿರ್ಲಕ್ಷ್ಯತನ ಕಂಡು ಬಂದರೆ, ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆ ಗುರಿ ಪಡಿಸುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ ನೀಡಿದರು.

ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ರಸ್ತೆ ಸುರಕ್ಷಿತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಸ್ತೆ ಸುರಕ್ಷತಾ ಸಮಿತಿ ನೀಡಿದ ಸೂಚನೆಗಳನ್ನು ಅಧಿಕಾರಿಗಳು ತಪ್ಪದೆ ಪಾಲಿಸಬೇಕು. ಜಿಲ್ಲೆಯಲ್ಲಿ ಉಂಟಾಗುತ್ತಿರುವ ಅಪಘಾತಗಳ ಪ್ರಮಾಣ ಇಳಿಕೆಯಾಗಬೇಕು. ರಾಷ್ಟ್ರೀಯ, ರಾಜ್ಯ ಹಾಗೂ ಜಿಲ್ಲಾ ರಸ್ತೆಗಳ ಸುರಕ್ಷತಾ ಲೆಕ್ಕ ಪರಿಶೋಧನೆಯನ್ನು ಮಾಡಿಸಬೇಕು. ನಿರ್ವಹಣೆ ತೊಂದರೆಯಿಂದ ರಸ್ತೆಯಲ್ಲಿ ಅಪಘಾತ ಉಂಟಾದರೆ, ಸಂಬಂಧಿಸಿದ ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಸೇರಿದಂತೆ ರಸ್ತೆ ನಿರ್ಮಾಣ ಹಾಗೂ ನಿರ್ವಹಣೆ ಹೊಣೆ ಹೊತ್ತ ಇಲಾಖೆ ಹಾಗೂ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಪುನರುಚ್ಛಿಸಿದರು.

ಮುಂದಿನ ಮೂರು ತಿಂಗಳ ನಂತರ ಸಭೆ ಸೇರುವ ವೇಳೆಗೆ ಪರಿಸ್ಥಿತಿ ಸುಧಾರಣೆ ಆಗಿರಬೇಕು.ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ನಡೆಸಲು ವಲಯಗಳನ್ನು ಗುರುತಿಸಬೇಕು. ಪಾರ್ಕಿಂಗ್, ಆಟೋ ಹಾಗೂ ಜಾಹೀರಾತು ಪ್ರದರ್ಶನ ಸ್ಥಳಗಳನ್ನು ಗುರುತಿಸಿ ಅಧಿಸೂಚಿಸಬೇಕು. ಎಲ್ಲಾ ಇಲಾಖೆಗಳಲ್ಲಿ ರಸ್ತೆ ನಿರ್ಮಾಣದ ಕಾಮಗಾರಿಗೆ ಟೆಂಡರ್ ನೀಡುವ ವೇಳೆ, ರಸ್ತೆ ಸುರಕ್ಷತೆಯನ್ನು ಧ್ಯಾನದಲ್ಲಿರಿಸಿ ನಿಯಮಗಳನ್ನು ವಿಧಿಸಬೇಕು. ವಸ್ತುಗಳ ಸಾಗಾಣೆ ಮಾಡುವ ವಾಹನಗಳಲ್ಲಿ ಸಾರ್ವಜನಿಕರ ಓಡಾಟಕ್ಕೆ ಅವಕಾಶ ನೀಡಬಾರದು. ಸಾರಿಗೆ ಇಲಾಖೆ ಅಧಿಕಾರಿಗಳು ಇದರ ಬಗ್ಗೆ ನಿಗಾವಹಿಸಬೇಕು. ರಸ್ತೆ ಹಾಗೂ ವಾಹನ ಸಾಮರ್ಥ್ಯಕ್ಕಿಂತ ಅಧಿಕ ಭಾರ ಹೊತ್ತು‌ ಸಾಗುವ ಅದಿರು ಸಾಗಟ ಲಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ ಸೂಚನೆ ನೀಡಿದರು.

 

 

 

ರಸ್ತೆ ಸುರಕ್ಷತಾ ನಿಧಿಯಡಿಯಲ್ಲಿ ಅನುದಾನ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ. ರಸ್ತೆ ಸುರಕ್ಷತಾ ನಿಧಿಯಿಂದ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಅಪಘಾತ ವಲಯಗಳಲ್ಲಿ ಸೂಚನಾ ಫಲಕ, ಮಾರ್ಕಿಂಗ್, ಬ್ಲಿಂಕರ್ಸ್ ಅಳವಡಿಕೆ ಸೇರಿದಂತೆ ಅಗತ್ಯ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಚಿತ್ರದುರ್ಗ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಸೇವಾ ರಸ್ತೆಗಳಲ್ಲಿ ರಾತ್ರಿ ಸಮಯದಲ್ಲಿ ಕಳ್ಳತನ ಪ್ರಕರಣಗಳು ಆಗುತ್ತಿದ್ದು, ಈ ರಸ್ತೆಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಬೇಕು. ಬೀದಿಬದಿ ವ್ಯಾಪಾರ ಮಾಡುವುದರಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ನಗರಸಭೆ ಕಡೆಯಿಂದ ಸೂಕ್ತ ಜಾಗವನ್ನು ಕಲ್ಪಿಸಿ, ರಸ್ತೆಯ ಮೇಲೆ ವ್ಯಾಪಾರ ಮಾಡದಂತೆ ನೋಡಿಕೊಂಡರೆ ನಗರದ ಪ್ರದೇಶದಲ್ಲಿ ಸಂಚಾರಿ ದಟ್ಟಣೆ ಕಡಿಮೆ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬಹುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ಅಪಘಾತದಲ್ಲಿ ವಾರ್ಷಿಕ 500 ಜನರ ಸಾವು…!

ಚಿತ್ರದುರ್ಗ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳಲ್ಲಿ ವಾರ್ಷಿಕವಾಗಿ ಸರಾಸರಿ 23 ಜನರು ಹತ್ಯೆಗೀಡಾದರೆ, ರಸ್ತೆ ಅಪಘಾತದಲ್ಲಿ 500ಕ್ಕೂ ಅಧಿಕ ಅಮಾಯಕ ಜನರು ಸಾವಿಗೀಡಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ, ಅವೈಜ್ಞಾನಿಕ ರಸ್ತೆ ನಿರ್ಮಾಣ, ಸಂಚಾರ ಚಿಹ್ನೆಗಳು ಇಲ್ಲದಿರುವುದು. ವಿವಿಧ ಇಲಾಖೆಗಳ ಸಮನ್ವಯತೆ ಕೊರತೆ. ಸಂಬಂಧ ಪಟ್ಟ ನಿರ್ವಹಣೆಯ ಹೊಣೆ ಒತ್ತ ಇಲಾಖೆಯ ಅಧಿಕಾರಿಗಳು ಹಾಗೂ ವಾಹನ ಚಾಲಕ ನಿರ್ಲಕ್ಷ ಬೇಜವಬ್ದಾರಿಯಾಗಿದೆ. ಚಿತ್ರದುರ್ಗ ಜಿಲ್ಲೆ ಅಪಘಾತದಲ್ಲಿ ಸಾವು ನೋವು ಉಂಟಾಗುವುದಕ್ಕೆ ಅಪಖ್ಯಾತಿ ಗಳಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮಮೇಂದ್ರ ಕುಮಾರ್ ಮೀನಾ ಬೇಸರ ವ್ಯಕ್ತ ಪಡಿಸಿದರು.

ಹಿರಿಯೂರು ನಿಂದ ಭರಮಸಾಗರದವರೆಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಿನ ಅಪಘಾತ ಸಂಭವಿಸಿ ಜನರು ಸಾವಿಗೆ ಈಡಾಗುತ್ತಿದ್ದಾರೆ. ಇದರೊಂದಿಗೆ ಹಿರಿಯೂರು-ಬಳ್ಳಾರಿ ಹೆದ್ದಾರಿ, ಚಿತ್ರದುರ್ಗ-ಶಿವಮೊಗ್ಗ ಹೆದ್ದಾರಿಗಳು ಸಹ ಅಪಘಾತ ವಲಯಗಳನ್ನು ಹೊಂದಿವೆ. ರಸ್ತೆ ನಿರ್ಮಾಣ ಮಾಡುವುದು ಮಾತ್ರವಲ್ಲದೇ, ರಸ್ತೆ ಸುರಕ್ಷತೆ ಕುರಿತು ಗಮನಹರಿಸುವುದು ಮುಖ್ಯವಾಗಿದೆ. ವಾಹನಗಳ ಮಾಲೀಕರು ರಸ್ತೆ ತೆರಿಗೆ, ಹೆದ್ದಾರಿ ಶುಲ್ಕ ಸೇರಿದಂತೆ ಇತ್ಯಾದಿ ಎಲ್ಲಾ ತೆರಿಗೆ ಪಾವತಿಸುತ್ತಾರೆ. ಹಾಗಾಗಿ ರಸ್ತೆಯಲ್ಲಿ ಸುರಕ್ಷಿತವಾಗಿ ಚಲಿಸಲು ಅನುಕೂಲ ಮಾಡಿಕೊಡಬೇಕು. ರಸ್ತೆ ನಿರ್ಮಾಣ ಹಾಗೂ ನಿರ್ವಹಣೆಯನ್ನು ಸಂಬಂಧಪಟ್ಟ ಇಲಾಖೆಯವರು ಯಾವುದೇ ಇಂಜಿನಿಯರಿಂಗ್ ತೊಂದರೆಗಳು ಬಾರದಂತೆ ನಿರ್ಮಿಸಬೇಕು.

ಸದ್ಯ ಚಿತ್ರದುರ್ಗ-ಹೋಸಪೇಟೆ ಹೆದ್ದಾರಿಯ ನಿರ್ವಹಣೆ ಹೊತ್ತ ಕಂಪನಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕೆಳ ತಿಂಗಳ ಹಿಂದೆ ಭೀಕರ ಅಪಘಾತ ಸಂಭವಿಸಿದ ಬಳಿಕ, ಈ ಹೆದ್ದಾರಿ ಪಕ್ಕದಲ್ಲಿ ಲಾರಿ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ರಸ್ತೆ ಮಾರ್ಗದಲ್ಲಿ ಪೊಲೀಸ್ ಗಸ್ತನ್ನು ಹೆಚ್ಚಿಸಲಾಗಿದೆ. ಇದರಿಂದ ಅಪಘಾತ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಆದರೆ ಚಿತ್ರದುರ್ಗ ನಗರದಲ್ಲಿ ಹಾದು ಹೋಗಿರುವ ಹಳೆಯ ಹೆದ್ದಾರಿ ರಸ್ತೆ ನಿರ್ವಹಣೆ ಇಲ್ಲದೇ ಅಪಘಾತ ಪ್ರಮಾಣ ಹೆಚ್ಚಾಗುತ್ತಿದೆ. ಈಗಾಗಲೇ ರಸ್ತೆಯನ್ನು ಹೆದ್ದಾರಿ ಪ್ರಾಧಿಕಾರ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿದೆ. ತಕ್ಷಣವೇ ಹೆದ್ದಾರಿ ಮಧ್ಯದ ಡಿವೈಡರ್‌ಗಳಲ್ಲಿ ಬೆಳೆದಿರುವ ಗಿಡಗಳನ್ನು ಕಡಿಯುವ ಕೆಲಸವಾಗಬೇಕು. ಇಲ್ಲವಾದರೆ ಚಾಲಕರಿಗೆ ರಸ್ತೆ ಸಂಚಾರಿ ಫಲಕಗಳು, ಯು ಟರ್ನ್ ಸ್ಥಳಗಳು‌ ಗೊತ್ತಾಗದೆ ಅಪಘಾತ ಸಂಭವಿಸುತ್ತದೆ. ಕಳೆದ ತಿಂಗಳಿನಲ್ಲಿ ದಾವಣಗೆರೆ ರಸ್ತೆಯಲ್ಲಿನ ಬೋವಿ ಮಹಾಸಂಸ್ಥಾನ ಮಠದ ಸಮೀಪದ ಯೂ ಟರ್ನ್ ಬಳಿ ಇನೋವಾ ಕಾರು, ತಿರುವು ಪಡೆಯುತ್ತಿದ್ದ ಲಾರಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಧರ್ಮಮೇಂದ್ರ ಕುಮಾರ್ ಮೀನಾ ತಿಳಿಸಿದರು.

ಹೆಚ್ಚಿನ ಅಪಘಾತಗಳಲ್ಲಿ ಕುಟುಂಬದಲ್ಲಿ ದುಡಿಯುವ ವ್ಯಕ್ತಿವೇ ಮೃತಪಟ್ಟು ಕುಟುಂಬಗಳು ಬೀದಿಪಾಲಾಗುತ್ತಿವೆ. ಇದು ಅತ್ಯಂತ ಖೇದರಕ ಸಂಗತಿಯಾಗಿದೆ. ಇನ್ನೂ ಚಿತ್ರದುರ್ಗ ಜಿಲ್ಲೆಯ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಹೆದ್ದಾರಿಗಳಲ್ಲಿ ಅಪಘಾತ ಹೆಚ್ಚಾಗುತ್ತಿವೆ. ಹಳೆಯ ಗೂಡ್ಸ್ ವಾಹನ, ಟ್ಯಾಕ್ಟರ್, ಲಾರಿ, ಟಿಪ್ಪರ್‌ಗಳ ಹಿಂಬದಿಯಲ್ಲಿ ರಿಫ್ಲಕ್ಟರ್‌ಗಳು ಇಲ್ಲದೇ ಇರುವುದು ಕಂಡುಬುರುತ್ತದೆ. ಸಾರಿಗೆ ಇಲಾಖೆ ಅಧಿಕಾರಿಗಳು ರಿಫ್ಲಕ್ಟರ್‌ಗಳ ಅಳವಡಿಕೆಗೆ ವಿಶೇಷ ಆಂದೋಲ ನೆಡೆಸುವಂತೆ ಹೇಳಿದರು.

ಸಭೆಯಲ್ಲಿ ಲೋಕೋಪಯೋಗಿ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್‌‌.ಎಂ.ಕಾಳೆಸಿಂಗ್, ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ನಗರಸಭೆ ಆಯುಕ್ತೆ ಎಂ.ರೇಣುಕಾ ಸೇರಿದಂತೆ ಹೆದ್ದಾರಿ ಪ್ರಾಧಿಕಾರ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *