ಅಂತೂ ಅಬ್ಬಿನಹೊಳಲು ನಲ್ಲಿ ಭೂಸ್ವಾಧೀನ ಪ್ರಕ್ರಿಯೆ ಶುರು
ಭದ್ರಾ ಮೇಲ್ದಂಡೆ ಯೋಜನೆ ಜಾಮಗಾರಿಗೆ ಅಡ್ಡಿಯಾಗಿದ್ದ ಅಬ್ಬಿನಹೊಳಲು ಬಳಿಯ ಭೂ ಸ್ವಾಧೀನ ಪ್ರಕ್ರಿಯೆ ಅಧಿಕಾರಿಗಳು ಹಾಗೂ ಪೊಲೀಸರ ಸಮ್ಮುಖದಲ್ಲಿಂದು ಆರಂಭವಾಯಿತು. ಚಿಕ್ಕಮಗಳೂರಿನ ತರಿಕೆರೆ ತಾಲೂಕಿನ ಅಬ್ಬಿನಹೊಳಲು ಗ್ರಾಮದ ಕೆಲ ರೈತರು ಭೂಸ್ವಾಧೀನ ಪ್ರಕ್ರಿಯೆಗೆ ಅಡ್ಡಿಪಡಿಸಿದ್ದರು.ಈ ಹಿನ್ನೆಲೆಯಲ್ಲಿ ಉಪಮುಖ್ಯ ಮಂತ್ರಿ ಡಿಕೆಶಿವಕುಮಾರ್ ಅವರು ಭೇಟಿ ನೀಡಿ ಸಭೆ ನಡೆಸಿ ರೈತರ ಮನವೊಲಿಸಿದ್ದರು. ಆದರೂ ಮುಂಜಾಗ್ರತಾ ಕ್ರಮವಾಗಿ 170 ಮಂದಿ ಪೋಲೀಸರು, ಆತ್ಮಾಹುತಿ ತಡೆ ದಳ ಸೇರಿದಂತೆ ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಜೊತೆ ಜೊತೆಯಲ್ಲಿಯೇ ಕಾಲುವೆ ನಿರ್ಮಾಣದ ಕಾಮಗಾರಿಯೂ ಕೂಡ ಪ್ರಾರಂಭಿಸಲಾಗಿದೆ.ಕಳೆದ ಎಂಟು ವರ್ಷಗಳಿಂದ ಭೂ ಸ್ವಾಧೀನ ಪ್ರಕ್ರಿಯೆ
ನೆನೆಗುದಿಗೆ ಬಿದ್ದಿತ್ತು. 1.7 ಕಿ.ಮೀ ಭೂಮಿ ವಶಕ್ಕೆ ಪಡೆಯುವ ಹಾಗೂ ಕಾಮಗಾರಿ ನಡೆಸಲು ರೈತರು ಅಡ್ಡಿ ಮಾಡಿದ್ದರು.
ಕಳೆದ ಮಾರ್ಚ್ 3 ರಂದು ಸ್ಥಳಕ್ಕೆ ಭೇಟಿ ನೀಡಿ ರೈತರೊಂದಿಗೆ ಮಾತುಕತೆ ನಡೆಸಿದ್ದ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ರೈತರಿಗೆ ಅನ್ಯಾಯ ಮಾಡುವುದಿಲ್ಲ, ಕಾನೂನಿನ ಚೌಕಟ್ಟಿನಲ್ಲಿಯೇ ಪರಿಹಾರ ಒದಗಿಸುವುದಾಗಿ ಭರವಸೆಯನ್ನು ಸಹ ನೀಡಿದ್ದರು. ಅದೇ ರೀತಿ ಕಾಲುವೆ ನಿರ್ಮಾಣಕ್ಕೆ ಭೂಮಿ ಬಿಟ್ಟು ಕೊಡದಿದ್ದರೆ ಕಾನೂನಾತ್ಮಕ ವಾಗಿ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದ್ದರು. ಸಚಿವರು ಬಂದು ಹೋದ ಮೂರು ದಿನಗಳ ನಂತರ ಪೋಲೀಸರ ಭದ್ರತೆ ನಡುವೆ ಕಾಮಗಾರಿಗಾಗಿ ಭೂಮಿ ವಶಕ್ಜೆ ಪಡೆಯುವ ಕಾರ್ಯ ಕೈಗೊಳ್ಳಲಾಗಿದೆ.
ಅಬ್ಬಿನಹೊಳಲು ಭೂ ವಶಕ್ಕೆ ಮಂಗಳವಾರ ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ಜಲ ಸಂಪನ್ಮೂಲ ಇಲಾಖೆ ಮನವಿ ಮಾಡಿತ್ತು.
ಭದ್ರಾ ಮೇಲ್ದಂಡೆ ಮುಖ್ಯ ಇಂಜಿನಿಯರ್ ಕೆ.ಎಂ.ಶಿವಪ್ರಕಾಶ್ ನೇತೃತ್ವದಲ್ಲಿ ಭೂಮಿ ವಶ ಪಡೆಯವ ಕಾರ್ಯಾಚರಣೆ ಕೈಗೊಳ್ಳಲಾಗಿದೆ.