ರಾಜಕಾರಣ ಚುನಾವಣೆಗೆ ಸೀಮಿತ ಇರಬೇಕು. ಬಳಿಕ ಪಕ್ಷ, ಜಾತಿ, ಧರ್ಮ, ಊರು, ನನಗೆ ಮತ ಹಾಕಿದವರು ಎಂಬ ಭೇದಭಾವವಿಲ್ಲದೆ ಜನರ ಪರ ಕೆಲಸ ಮಾಡುವವರೇ ನಿಜವಾದ ಜನಪ್ರತಿನಿಧಿಗಳು ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ತಾಲೂಕಿನ ಹೊಸಹಳ್ಳಿ, ಗೌಡಿಹಳ್ಳಿ, ಆರ್.ಗೊಲ್ಲರಹಟ್ಟಿ, ಆರ್.ಕಾವಲು, ಎನ್.ಜಿ.ಹಳ್ಳಿ ಸೇರಿ ವಿವಿಧೆಡೆ ಗುರುವಾರ ಮತಪ್ರಚಾರ ವೇಳೆ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವನಾಗಿದ್ದ ನಾನು ಕ್ಷೇತ್ರದಲ್ಲಿ ಸಾವಿರಾರು ಕೊಳವೆಬಾವಿ ಮಂಜೂರು ಮಾಡಿದ್ದೇ ಎಂದರು.ಜೊತೆಗೆ ನನ್ನ ಅಧಿಕಾರ ಬಳಸಿ ಎಲ್ಲ ವರ್ಗದ ಕೃಷಿಕರ ಬದುಕು ಹಸನು ಮಾಡಲು ಬೊರ್ವೆಲ್ ಮಂಜೂರು ಮಾಡಿದ್ದೇ. ಆದರೆ, ಚುನಾವಣೆ ದಿಢೀರ್ ಘೋಷಣೆ ಆಗಿದ್ದರಿಂದ ಅವರಿಗೆ ಕೊರೆಯಿಸಲು ಸಾಧ್ಯವಾಗಿರಲಿಲ್ಲ. ಆದರೆ, ಕ್ಷೇತ್ರದಲ್ಲಿ ಗೆದ್ದಂತಹ ಎಂ.ಚಂದ್ರಪ್ಪ, ಇವುಗಳಿಗೆ ತಡೆ ಹಾಕಿದರು ಎಂದು ದೂರಿದರು. ಸಾವಿರಾರು ರೈತರು, ನಮಗೆ ಮಂಜೂರು ಆಗಿರುವ ಕೊಳವೆಬಾವಿ ಕೊರೆಯಿಸಿ ಎಂದು ಪ್ರತಿಭಟನೆ ನಡೆಸಿದರೂ ದ್ವೇಷದ ರಾಜಕಾರಣವನ್ನೇ ಜೀವನವನ್ನಾಗಿಸಿಕೊಂಡಿದ್ದ ಚಂದ್ರಪ್ಪ, ಯಾವುದೇ ಕಾರಣಕ್ಕೂ ನಿಮಗೆ ಬೊರ್ವೆಲ್ ಕೊರೆಯಿ ಸುವುದಿಲ್ಲ ಎಂದು ಹೇಳಿ, ದ್ವೇಷದ ರಾಜಕಾರಣಕ್ಕೆ ಬಡ ಕೃಷಿಕರ ಬದುಕನ್ನು ಬಲಿಕೊಟ್ಟರು ಎಂದು ಆರೋಪಿಸಿದರು.
ಇದೇ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ತಡೆ ಹಾಕಿದ್ದಾರೆ. ಜೊತೆಗೆ ಕಮಿಷನ್ ಕೊಟ್ಟರೇ ಮಾತ್ರ ಕೆಲಸ ಎಂಬ ರೀತಿ ವರ್ತಿಸಿದ್ದಾರೆ. ಈ ಸಂಬಂಧ ರೈತಸಂಘದ ಎಲ್ಲ ಬಣಗಳು ವಿವಿಧ ಹಂತದಲ್ಲಿ ಹೋರಾಟ ನಡೆಸಿದರು ಸ್ಪಂದಿಸಿಲ್ಲ. ಇಂತಹ ದ್ವೇಷದ ರಾಜಕಾರಣಿಗೆ ಜನರು ಪಾಠ ಕಲಿಸಲು ಕಾಯುತ್ತಿದ್ದಾರೆ. ಸ್ವತಃ ಬಿಜೆಪಿ ಕಾರ್ಯಕರ್ತರೇ ಶಾಸಕರ ಅಹಂಕಾರಕ್ಕೆ ಮನನೊಂದಿದ್ದು, ದಾಖಲೆ ಮತಗಳ ಅಂತರದಲ್ಲಿ ಸೋಲಿಸಬೇಕೆಂದು ಎಲ್ಲರು ಪಣ ತೊಟ್ಟಿದ್ದಾರೆ ಎಂದರು.ರಾಜಕಾರಣ ಎಂಬುದು ಚುನಾವಣೆ ನೀತಿ ಸಂಹಿತೆ ಇದ್ದಂತೆ. ಮತದಾನ, ಫಲಿತಾಂಶ ಬಳಿಕ ಎಲ್ಲವನ್ನೂ ಮರೆತು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಗುಣ ಬೆಳೆಸಿಕೊಳ್ಳಬೇಕು. ನನ್ನ ಅವಧಿಯಲ್ಲಿ ಬಿಜೆಪಿ, ಜೆಡಿಎಸ್, ರೈತಸಂಘ, ಕಾಂಗ್ರೆಸ್ ಸೇರಿದಂತೆ ಎಲ್ಲ ವರ್ಗದ ಕೆಲಸ ಮಾಡಿ ಕೊಟ್ಟಿದ್ದೇನೆ. ಅದು ಜನಪ್ರನಿಧಿ ಆಗಿರುವವರ ಕರ್ತವ್ಯ ಎಂದು ಹೇಳಿದರು.ನನ್ನ ವಿರುದ್ಧ ಚುನಾವಣೆ ಮಾಡಿದ ಬಡ ವ್ಯಕ್ತಿಯೊಬ್ಬ ಮನೆ, ಬೋರ್ವೆಲ್ ಸೇರಿ ವಿವಿಧ ಸೌಲಭ್ಯ ಪಡೆಯುವುದು ಅವನ ಹಕ್ಕು. ಅದನ್ನು ಅವನಿಗೆ ದೊರಕಿಸಿ ಕೊಡುವುದು ಜನಪ್ರತಿ ನಿಧಿಗಳ ಕರ್ತವ್ಯ. ಆದರೆ, ಅವನು ನನ್ನ ವಿರುದ್ಧ ಚುನಾವಣೆಯಲ್ಲಿ ಕೆಲಸ ಮಾಡಿದ ಎಂದು ದ್ವೇಷ ಸಾಧಿಸಿದರೆ ಜನಪ್ರತಿನಿಧಿ ಯಾಗಲು ಅನರ್ಹ ಎಂಬುದು ಕ್ಷೇತ್ರದ ಶಾಸಕರು ಅರಿತು ಕೊಳ್ಳಬೇಕಿತ್ತು. ಆದರೆ, ಈ ಸತ್ಯ ಅರಿಯದೇ ಸಾವಿರಾರು ಬಡವರು, ರೈತರು, ನಿರುದ್ಯೋಗಿ ಗಳಿಗೆ ಸೌಲಭ್ಯ ನೀಡದೆ ಅನ್ಯಾಯ ಮಾಡಲಾಗಿದೆ. ಈ ಆಕ್ರೋಶ ಜನರ ಮನದಲ್ಲಿದ್ದು, ಗೆಲ್ಲಿಸಿದ ತಪ್ಪಿಗೆ ಪಶ್ಚಾತಾಪದಿಂದ ಮೌನವಾಗಿದ್ದು, ತಕ್ಕ ಪಾಠ ಕಲಿಸಲು ಮತದಾನದ ದಿನಕ್ಕೆ ಎದುರು ನೋಡುತ್ತಿದ್ದಾರೆ ಎಂದು ತಿಳಿಸಿದರು.ಮುಖಂಡರಾದ ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್, ಜಿಪಂ ಮಾಜಿ ಉಪಾಧ್ಯಕ್ಷ ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಟಿ.ಹನುಮಂತಪ್ಪ,
ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕಾಟೀಹಳ್ಳಿ ಶಿವಣ್ಣ, ಕಾಂಗ್ರೆಸ್ ಜಿಪಂ ಮಾಜಿ ಉಪಾಧ್ಯಕ್ಷ ಗಂಗಾಧರ್, ಕಾಂಗ್ರೆಸ್ ಒಬಿಸಿ ತಾಲೂಕು ಘಟಕದ ಅಧ್ಯಕ್ಷ ಪುರುಷೋತ್ತಮ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ವಿಶ್ವನಾಥನಹಳ್ಳಿ ಗ್ರಾಪಂ ಅಧ್ಯಕ್ಷ ತಿಮ್ಮೇಶ್ ಮುಖಂಡರಾದ ವೈಶಾಖ, ಮಹಂತೇಶ್, ಯೋಗೇಶ್, ಪ್ರಹ್ಲಾದ್ ಚೇತನ್ಕುಮಾರ್, ವಿಜಯ್ಕುಮಾರ್ ಉಪಸ್ಥಿತರಿದ್ದರು.