181 ಪ್ರಕರಣ ದಾಖಲು, ರೂ.1.12 ಕೋಟಿಗೂ ಅಧಿಕ ಮೌಲ್ಯದ ಮದ್ಯ ವಶ
ಸಾರ್ವತ್ರಿಕ ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಾದ ಮಾರ್ಚ್.16 ರಿಂದ ಮಾರ್ಚ್.26 ವರೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯು ಜಾರಿ ಮತ್ತು ತನಿಖಾ ಕಾರ್ಯ ತೀವ್ರಗೊಳಿಸಿದೆ. ಈ ಅವಧಿಯಲ್ಲಿ ಜಿಲ್ಲೆಯಾದ್ಯಂತ ರೂ.1.12 ಕೋಟಿಗೂ ಅಧಿಕ ಮೌಲ್ಯದ 22,360 ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧವಾಗಿ 181 ಪ್ರಕರಣ ದಾಖಲಿಸಿಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಡಾ.ಬಿ.ಮಾದೇಶ್ ಮಾಹಿತಿ ನೀಡಿದ್ದಾರೆ.
ಚಳ್ಳಕೆರೆ ಹಾಗೂ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಹೆಚ್ಚಿನ ಮೌಲ್ಯದ ಮದ್ಯ ಜಪ್ತು ಮಾಡಲಾಗಿದೆ.ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೂ.59,26,238 ಮೌಲ್ಯದ 14,741 ಲೀಟರ್ ಅಕ್ರಮ ಮದ್ಯ ಹಾಗೂ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ರೂ.52,32,166 ಮೌಲ್ಯದ
7,440 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಉಳಿದಂತೆ ಮೊಳಕಾಲ್ಮೂರು ಕ್ಷೇತ್ರ ವ್ಯಾಪ್ತಿಯಲ್ಲಿ ರೂ.11,089 ಮೌಲ್ಯದ 30 ಲೀಟರ್ ಮದ್ಯ, ಹಿರಿಯೂರು ಕ್ಷೇತ್ರ ವ್ಯಾಪ್ತಿಯಲ್ಲಿ ರೂ. 34,049 ಮೌಲ್ಯದ 76 ಲೀಟರ್ ಮದ್ಯ, ಹೊಸದುರ್ಗ ಕ್ಷೇತ್ರ ವ್ಯಾಪ್ತಿಯಲ್ಲಿ ರೂ.17,956 ಮೌಲ್ಯದ 39 ಲೀಟರ್ ಮದ್ಯ, ಹೊಳಲ್ಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ ರೂ.15,551 ಮೌಲ್ಯದ 34 ಲೀಟರ್ ಮದ್ಯ ವಶಪಡಿಸಿಕೊಂಡು ಪ್ರಕರಣಗಳನ್ನು ದಾಖಲಿಸಲಾಗಿದೆ. ಕಾರ್ಯಚರಣೆ ಮುಂದುವರಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಡಾ.ಬಿ.ಮಾದೇಶ್ ತಿಳಿಸಿದ್ದಾರೆ.