ಚಿತ್ರದುರ್ಗ (ಸಂವಾ)-ಎಂಇಎಸ್ ಹಾಗೂ ಶಿವ ಸೇನೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕವು ಜಿಲ್ಲಾಧ್ಯಕ್ಷ ಟಿ. ರಮೇಶ್ ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಪ್ರತಿಭಟನಾ ಮೆರವಣಿಗೆಯಲ್ಲಿ ಬಂದ ಕರವೇ ಕಾರ್ಯಕರ್ತರು ನಾಡ ಧ್ವಜಕ್ಕೆ ಬೆಂಕಿ ಹಚ್ಚಿದ, ಬಸವಣ್ಣನವರ ಭಾವಚಿತ್ರಕ್ಕೆ ಸಗಣಿ ಬಳಿದ ಹಾಗೂ ಸಂಗೊಳ್ಳಿ ರಾಯಣ್ಣ ನ ಪ್ರತಿಮೆಯನ್ನು ವಿಕೃತಗೊಳಿಸಿದ ಶಿವಸೇನೆ ಹಾಗೂ ಎಂಇಎಸ್ ಸಂಘಟನೆಗಳನ್ನು ನಿಷೇಧಿಸಬೇಕು.ಇವೆರಡು ಹಲವು ದಶಕಗಳಿಂದಲೂ ಬೆಳಗಾವಿಯಲ್ಲಿ ಭಾಷಾ ಸಮೂದಾಯಗಳ ನಡುವೆ ದ್ವೇಷ, ಪ್ರತೀಕಾರದ ಭಾವನೆಗಳನ್ನು ಮೂಡಿಸುತ್ತಿವೆ. ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿವೆ. ಅಲ್ಲದೆ ರಾಜ್ಯ ಸರ್ಕಾರದ ಆಸ್ತಿ ಪಾಸ್ತಿಗಳನ್ನು ಹಾಳು ಮಾಡುತ್ತಿವೆ. ಇದರಿಂದ ಬೆಳಗಾವಿ ಜನತೆಯಲ್ಲಿ ಆತಂಕ, ಭಯ, ಅಭದ್ರತೆಯನ್ನು ಮೂಡಿಸುತ್ತಿವೆ. ಹೀಗಾಗಿ ಎರಡೂ ಸಂಘಟನೆ/ ರಾಜಕೀಯ ಪಕ್ಷಗಳನ್ನು ನಿಷೇಧಿಸಬೇಕು, ನಿಷೇಧಕ್ಕೆ ಅಗತ್ಯವಿರುವ ಎಲ್ಲಾ ಬಗೆಯ ಕಾನೂನು/ ರಾಜಕೀಯ ಪ್ರಕ್ರಿಯೆಗಳನ್ನು ಆರಂಭಿಸಬೇಕು ಎಂದು ಬೇಡಿಕೆಯನ್ನು ಇಟ್ಟುಕೊಂಡು ಪ್ರತಿಭಟನೆಯನ್ನು ನಡೆಸಿತು.