ಚಿತ್ರದುರ್ಗ ಜಿಲ್ಲೆ ರೈಲು ಪ್ರಯಾಣಿಕರಿಗೆ ಸಂತಸ ಸುದ್ದಿ
ಚಿಕ್ಕಜಾಜೂರಿನಿಂದ ಗುಂತಕಲ್ ಗೆ ವಿದ್ಯುತ್ ಚಾಲಿತ ರೈಲು ಸಂಚಾರ
ಚಿತ್ರದುರ್ಗ : ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ರೈಲ್ವೆ ನಿಲ್ದಾಣದಿಂದ ಆಂಧ್ರಪ್ರದೇಶದ ಗುಂತಕಲ್ ವರೆಗೆ ಮೊಟ್ಟ ಮೊದಲ ಬಾರಿಗೆ ವಿದ್ಯುತ್ ಚಾಲಿತ ಪ್ಯಾಸೆಂಜರ್ ರೈಲು ಸೇವೆ ಆರಂಭಗೊಂಡಿದ್ದು, ಚಿಕ್ಕಜಾಜೂರು ರೈಲ್ವೆ ನಿಲ್ದಾಣ ವ್ಯವಸ್ಥಾಪಕ ಜಯನಂದಮುರ್ತಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಲೋಕೋ ಇನ್ಸ್ಪೆಕ್ಟರ್ ಏಡುಕುಂಡಲು ಅವರ ಪರಿವೀಕ್ಷಣೆ ನಂತರ ಚಾಲಕರಾದ ಅನಂತರಾವ್ ಮತ್ತು ಪ್ರಶಾಂತ್ ಕುಮಾರ್ ಅವರು ವಿದ್ಯುತ್ ಚಾಲಿತ ರೈಲು ಸಂಚಾರ ಆರಂಭಿಸಿದೆ.
ಚಿಕ್ಕಜಾಜೂರು ರೈಲ್ವೆ ನಿಲ್ದಾಣದಿಂದ ಮಧ್ಯಾಹ್ನ 2.05 ಕ್ಕೆ ಹೊರಡುತ್ತದೆ. ಅಲ್ಲಿಂದ ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು, ರಾಯದುರ್ಗ ನಂತರ ಬಳ್ಳಾರಿ ಮೂಲಕ ಸಂಜೆ 7.05 ಗಂಟೆಗೆ ಗುಂತಕಲ್ ತಲುಪುತ್ತದೆ. ಮರುದಿನ ಬೆಳಿಗ್ಗೆ ಬೆಳಿಗ್ಗೆ 7.40 ಕ್ಕೆ ಹೊರಟು 1.30 ಕ್ಕೆ ಚಿಕ್ಕಜಾಜೂರು ರೈಲ್ವೆ ನಿಲ್ದಾಣ ತಲುಪಲಿದೆ. ಈ ಸದುಪಯೋಗವನ್ನು ಸಾರ್ವಜನಿಕರು ಪಡೆಯಬಹುದಾಗಿದೆ.
ಸ್ಥಗಿತಗೊಂಡಿದ್ದ ರೈಲು : ಎರಡು ವರ್ಷಗಳ ಕಾಲ ಕಾಡಿದ ಮಹಾಮಾರಿ ಕರೋನಾ ಹಿನ್ನೆಲೆಯಲ್ಲಿ ಡಿಸೇಲ್ ಅಳವಡಿತ ರೈಲು ಸೇವೆ ಸ್ಥಗಿತಗೊಂಡಿತ್ತು. ಇದೀಗ ಚಿಕ್ಕಜಾಜೂರಿನಿಂದ ಗುಂತಕಲ್ ಗೆ ವಿದ್ಯುತ್ ಚಾಲಿತ ರೈಲು ಮಾರ್ಗವಾಗಿ ಪರಿವರ್ತನೆಯಾಗಿ ಪ್ರತಿದಿನ ಪ್ಯಾಸೆಂಜರ್ ರೈಲು ಸಂಚಾರ ಆರಂಭಿಸಲಾಗಿದೆ.