ಚಿತ್ರದುರ್ಗ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪಡೆಯಲು ತೀವ್ರ ಪೈಪೋಟಿ ಎದುರಾಗಿದೆ. ಒಂದು ಕಡೆಗೆ ಚುನಾವಣೆಗೆ ನಾನು ಈ ಬಾರಿ ಸ್ಪರ್ಧಿಸುವುದಿಲ್ಲ, ಭ್ರಷ್ಟಾಚಾರ ನೋಡಿ ನನಗೆ ಸಾಕಾಗಿದೆ. ರಾಜಕೀಯದಿಂದ ದೂರ ಉಳಿಯುತ್ತೇನೆ ಎಂದು ಹೇಳಿಕೆ ನೀಡುತ್ತಾ ಬಂದಿರುವ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರಿಗೆ ಸಮುದಾಯದವರು ಮತ್ತೆ ಸ್ಪರ್ಧೆ ಮಾಡಬೇಕೆಂದು ಒತ್ತಡ ಹಾಕಿದ್ದು, ಇನ್ನೊಂದು ಕಡೆ ಬಿಜೆಪಿ ವರಿಷ್ಠರು ಕೂಡ ಹಾಲಿ ಸಂಸದರಾಗಿರುವುದರಿಂದ ಅವರಿಗೆ ಮಣೆ ಹಾಕುತ್ತದೆ ಎಂಬ ಮೂಲಗಳು ಹೇಳುತ್ತಿವೆ. ಇತ್ತ ಮಾದಾರ ಚನ್ನಯ್ಯ ಶ್ರೀಗಳು ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಚರ್ಚೆಗಳು ಜಿಲ್ಲೆ ತುಂಬಾ ಹರಿದಾಡುತ್ತಿವೆ. ಆದರೆ ಚನ್ನಯ್ಯ ಶ್ರೀಗಳು ನಾವು ಕೂಡ ಆಕಾಂಕ್ಷಿ ಎಂದು ಎಲ್ಲಿಯು ಹೇಳಿಲ್ಲ. ಮತ್ತೊಂದೆಡೆ ಹೊಳಲ್ಕೆರೆ ಶಾಸಕ ಡಾ. ಎಂ. ಚಂದ್ರಪ್ಪ ಹಾಗೂ ಅವರ ಪುತ್ರ ರಘು ಚಂದನ್ ಕೂಡ ಕಳೆದ ಬಾರಿಯೇ ಟಿಕೆಟ್ ಕೇಳಿದ್ದು, ವರಿಷ್ಠರು ವಯಸ್ಸಿನ ಕಾರಣವೇಳಿ ಸುಮ್ಮನಾಗಿಸಿದ್ದರು. ಆದರೆ ಈ ಬಾರಿ ಶತಾಯ ಗತಾಯ ಟಿಕೆಟ್ ಪಡೆಯಲೇಬೇಕೆಂದು ಬೆಂಗಳೂರು, ದೆಹಲಿ ಮತ್ತು ಆರ್ ಎಸ್ ಎಸ್ ನ ಕೇಂದ್ರ ಕಚೇರಿ ನಾಗಪುರದ ಬಾಗಿಲನ್ನು ಎಡತಾಕಿ ಬಂದಿದ್ದಾರೆ. ಇನ್ನು ಶಾಸಕ ಡಾ. ಎಂ. ಚಂದ್ರಪ್ಪ ಅವರು ಶಿವರಾತ್ರಿ ದಿನವೇ ನಸುಕಿನಲ್ಲಿ ರಾಜಧಾನಿ ಬೆಂಗಳೂರಿನ ಯಡಿಯೂರಪ್ಪ ಅವರ ಮನೆಗೆ ತೆರಳಿ ಮಾತುಕತೆಯಾಡಿದ್ದು, ದೆಹಲಿಗೂ ಹೋಗಿ ಬಂದಿದ್ದಾರೆ. ಇದರ ನಡುವೆ ಇಂದು ಶಿವಮೊಗ್ಗಾಕ್ಕೆ ತೆರಳಿ ಅಲ್ಲಿ ಯಡಿಯೂರಪ್ಪ ಅವರನ್ನು ಬೇಟಿಯಾಗಿದ್ದಾರೆ. ಟಿಕೆಟ್ ಗಾಗಿ ಒತ್ತಡವನ್ನು ಹಾಕಿದ್ದಾರೆ. ಇದರ ಬೆನ್ನಲ್ಲೆ ಮಾಧ್ಯಮಗಳೊಂದಿಗೆ ಮಾತಾಡಿದ ಶಾಸಕ ಡಾ.ಎಂ. ಚಂದ್ರಪ್ಪ, ನಾನು ಐದು ಸಲ ಎಂ ಎಲ್ ಎ ಆಗಿದ್ದೇನೆ. ಯಡಿಯೂರಪ್ಪ ಕುಟುಂಬದ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಯಾವಾಗಲೂ ಬರುವ ಹಾಗೆ ಬಂದಿದ್ದೇನೆ. ನಾನು ಕಳೆದ ಬಾರಿ ನನ್ನ ಮಗನಿಗೆ ಟಿಕೆಟ್ ಕೇಳಿದ್ದೆ ಮುಂದೆ ನೋಡೋಣ ಅಂದಿದ್ದರು. ಹಾಗಾಗಿ ಈ ಸಲ ಅವಕಾಶವಿದ್ರೆ ಟಿಕೆಟ್ ಕೊಡಿಸಿ ಎಂದು ಮನವಿ ಮಾಡಿದ್ದೇನೆ. ಅವರಿಗೆ ಎಷ್ಟು ಒತ್ತಡವಿರುತ್ತದೆ, ಅವರು ಪಾರ್ಲಿಮೆಂಟರಿ ಸದಸ್ಯರು ಆಗಿದ್ದಾರೆ. ನನ್ನ ಮಗನೂ ಟಿಕೆಟ್ ಆಕಾಂಕ್ಷಿಯಾಗಿದ್ದಾನೆ. ನಾನು ಯಡಿಯೂರಪ್ಪ ಅವರ ಮೇಲೆ ವಿಶ್ವಾಸವಿಟ್ಟಿದ್ದೇನೆ. ಟಿಕೆಟ್ ಮೇಲೆ ವಿಶ್ವಾಸವಿಟ್ಟಿಲ್ಲ ಎಂದು ಹೇಳಿದ್ದಾರೆ. ಒಟ್ಟಾರೆ ಚಿತ್ರದುರ್ಗದ ಬಿಜೆಪಿ ಟಿಕೆಟ್ ಗಾಗಿ ತೀವ್ರ ಪೈಪೋಟಿ ನಡೆದಿದ್ದು, ಟಿಕೆಟ್ ಯಾರಿಗೆ ಸಿಗಲಿದೆ ಎಂಬುದು ತೀವ್ರ ಕುತೂಹಲವುಂಟು ಮಾಡಿದೆ.