ಹುಬ್ಬಳ್ಳಿ: ಭಾರತೀಯ ಜೀವನ ಪದ್ಧತಿಯಲ್ಲಿ ಯಾವುದಕ್ಕೂ ಕಡಿಮೆಯಿಲ್ಲ. ಯೋಗದಂಥ ದೇಸಿ ಪದ್ಧತಿ ಮೂಲಕ ಬಲಿಷ್ಠ ರಾಷ್ಟ್ರ ಕಟ್ಟಬೇಕು. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಸೆಡ್ಡು ಹೊಡೆದು, ಆ ಸಂಸ್ಕೃತಿ ದೂರ ಸರಿಸಬೇಕು. ನಿತ್ಯ ಜೀವನದಲ್ಲಿ ಯೋಗ, ಪ್ರಾಣಾಯಾಮ, ನಿಸರ್ಗ ಚಿಕಿತ್ಸೆ, ಆಯುರ್ವೆದ ಮತ್ತು ಉತ್ತಮ ನಡವಳಿಕೆ ಅಳವಡಿಸಿಕೊಳ್ಳಬೇಕು ಎಂದು ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಸಲಹೆ ನೀಡಿದರು.
ಹರಿದ್ವಾರದ ಪತಂಜಲಿ ಯೋಗ ಪೀಠದ ವತಿಯಿಂದ 1 ಸಾವಿರ ಯೋಗ ಶಿಕ್ಷಕರಿಗಾಗಿ ಆಯೋಜಿಸಿರುವ 1 ತಿಂಗಳ ಆನ್ಲೈನ್ ಯೋಗ ತರಬೇತಿ ಶಿಬಿರಕ್ಕೆ ಇಲ್ಲಿನ ಕೇಶ್ವಾಪುರ ಯೋಗ ಕಾರ್ಯಾಲಯದಲ್ಲಿ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಅಮೆರಿಕ, ರಷ್ಯಾದಲ್ಲಿ ಸಂಶೋಧನೆಯಾದ ಕರೊನಾ ಲಸಿಕೆ ಬಂದರೆ ಬಳಸಲು ಸಿದ್ಧರಿದ್ದೇವೆ. ಆದರೆ, ನಮ್ಮ ದೇಶದಲ್ಲಿ ನ್ಯಾಚುರೋಪಥಿ ಮತ್ತು ಆಯುರ್ವೆದದಲ್ಲಿ ಸರಳ ಔಷಧಗಳಿದ್ದರೂ ತೆಗೆದುಕೊಳ್ಳಲು ಹಿಂದೇಟು ಹಾಕುತ್ತೇವೆ ಎಂದು ಬೇಸರಿಸಿದರು.