ನಿವೃತ್ತ ಎ.ಆರ್.ಎಸ್.ಐ ರವಿಕುಮಾರ್ ಸಲಹೆ
ಪೊಲೀಸರು ಭಯ ಹಾಗೂ ಒತ್ತಡಗಳಿಂದ ಮುಕ್ತರಾಗಿ ಕೆಲಸ ನಿರ್ವಹಿಸಿ
ಪೊಲೀಸರು ಭಯ ಹಾಗೂ ಒತ್ತಡಗಳಿಂದ ಮುಕ್ತರಾಗಿ ಕೆಲಸ ನಿರ್ವಹಿಸಬೇಕು. ಕೆಲಸಕ್ಕೆ ಸೇರುವ ಆರಂಭದಲ್ಲಿ ಇದ್ದ ಆರೋಗ್ಯವನ್ನು ಕಾಪಾಡಿಕೊಂಡು ಸೇವೆ ಸಲ್ಲಿಸಿ ಲವಲವಿಕೆಯಿಂದ ನಿವೃತ್ತಿ ಹೊಂದಬೇಕು ಎಂದು ನಿವೃತ್ತ ಎ.ಆರ್.ಎಸ್.ಐ ರವಿಕುಮಾರ್.ಆರ್.ಟಿ ಸಲಹೆ ನೀಡಿದರು.
ನಗರದ ಡಿ.ಎ.ಆರ್. ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಾಗಿ ಭಾಗವಹಸಿ ಅವರು ಮಾತನಾಡಿದರು.
1991 ರಲ್ಲಿ ಪೊಲೀಸ್ ಇಲಾಖೆಗೆ ಸೇವೆಗೆ ಸೇರಿದಾಗಿನಿಂದಲೂ ಸದಾಕಲಾ ಕರ್ತವ್ಯಕ್ಕೆ ಬದ್ದನಾಗಿದ್ದೇನೆ. 39 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಪೊಲೀಸರು ಕರ್ತವ್ಯದ ಜೊತೆಗೆ ಆರೋಗ್ಯ ಮತ್ತು ಕುಟುಂಬದ ಬಗ್ಗೆಯೂ ಕಾಳಜಿ ವಹಿಸಬೇಕು. ಕರ್ತವ್ಯಕ್ಕೆ ಸೇರುವಾಗ ಇದ್ದ ಲವಲವಿಕೆಯನ್ನು ಕಾಪಾಡಿಕೊಂಡು ಕೆಲಸ ನಿರ್ವಹಿಸಿ ಸಂತಸದಿಂದ ನಿವೃತ್ತರಾಗಬೇಕು. ಇಲಾಖೆ ಸಿಬ್ಬಂದಿಗಾಗಿ ಅನೇಕ ಆರೋಗ್ಯ ಸೌಲಭ್ಯಗಳನ್ನು ನೀಡಿದೆ. ಇವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. 2023-24 ರಲ್ಲಿ ನಾನು ಸೇರಿ 28ಕ್ಕೂ ಹೆಚ್ಚಿನ ಪೊಲಿಸ್ ಸಿಬ್ಬಂದಿ ನಿವೃತ್ತರಾಗಿದ್ದಾರೆ. ಇವರಲ್ಲರನ್ನು ಕರೆದು ಇಂದು ಸನ್ಮಾಸಿಸಿರುವುದು ಸಂತಸ ತಂದಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವುದಕ್ಕೆ ನಾನು ಚಿರಋಣಿಯಾಗಿದ್ದೇನೆ ಎಂದು ರವಿಕುಮಾರ್.ಆರ್.ಟಿ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ವಾರ್ಷಿಕ ವರದಿ ವಾಚನ ಮಾಡಿ, ನಿವೃತ್ತ ಪೊಲೀಸ್ ಸಿಬ್ಬಂದಿ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮ ರೂಪಿಸಲಾಗಿದೆ. ಪೊಲೀಸ್ ಆರೋಗ್ಯ ಭಾಗ್ಯ ಯೋಜನೆಯನ್ನು ನಿವೃತ್ತಿ ಸಿಬ್ಬಂದಿಗಳಿಗೆ ವಿಸ್ತರಿಸಲಾಗಿದೆ. ಜಿಲ್ಲೆಯಲ್ಲಿ ಈ ಯೋಜನೆಯಡಿ 550 ನಿವೃತ್ತ ಪೊಲೀಸ್ ಸಿಬ್ಬಂದಿ ನೊಂದಣಿಯಾಗಿದ್ದಾರೆ. ಕಳೆದ ವರ್ಷದಲ್ಲಿ 23 ನಿವೃತ್ತ ಸಿಬ್ಬಂದಿಗೆ ಆರೋಗ್ಯ ಭಾಗ್ಯ ಯೋಜನೆಯಡಿ ಪಾವತಿಯಾಗದ ಚಿಕಿತ್ಸೆಗಳಿಗಾಗಿ ಪೊಲೀಸ್ ಕಲ್ಯಾಣ ನಿಧಿಯಿಂದ ರೂ. 2.32 ಲಕ್ಷ ಪಾವತಿಸಲಾಗಿದೆ. ಶವ ಸಂಸ್ಕಾರಕ್ಕಾಗಿ ರೂ.1.20 ಲಕ್ಷ ನೀಡಲಾಗಿದೆ. ಶೈಕ್ಷಣಿಕ ಯೋಜನೆಯಡಿ 111 ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ರೂ.14 ಲಕ್ಷ ನೆರವು ನೀಡಲಾಗಿದೆ . ಕಣ್ಣಿನ ದೋಷ ಇರುವ ಸಿಬ್ಬಂದಿಗಳ ಕನ್ನಡಕ ಖರೀದಿಗಾಗಿ ರೂ.36 ಸಾವಿರ ನೀಡಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಪೊಲೀಸ್ ಕ್ಯಾಂಟಿನ್, ಪ್ರಾವಿಜನ್ ಸ್ಟೋರ್,ಮೆಡಿಕಲ್ ಸ್ಟೋರ್ ತೆರಯಲಾಗಿದೆ.
ಹೆಚ್ಚು ತೂಕ ಹಾಗೂ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯ ದೈಹಿಕ ಕ್ಷಮತೆ ಹೆಚ್ಚಿಸಿ, ಉತ್ತಮ ಸ್ಥಿತಿಯಲ್ಲಿ ಇಡಲು ಇಸ್ರೇಲ್ ಮೂಲದ ಖಾಸಗಿ (ಹೈಗೇರ್)ಕಂಪನಿ ಸಹಯೋಗದಲ್ಲಿ ಪ್ರಥಮ ಬಾರಿಗೆ 130 ಸಿಬ್ಬಂದಿಗೆ ಸ್ಮಾರ್ಟ್ ವಾಚ್, ಎಲೆಸ್ಟಿಕ್ ಬ್ಯಾಂಡ್ ಹಾಗೂ ರಿಸವರ್ ನೀಡಲಾಗುತ್ತಿದೆ. ಈ ಮೂಲಕ ಸಿಬ್ಬಂದಿಯ ದೈಹಿಕ ಅಂಶಗಳನ್ನು ಮೇಲ್ವಿಚಾರಣೆ ಮಾಡಲಾಗುವುದು. ಮೂರು ತಿಂಗಳಲ್ಲಿ ಸಿಬ್ಬಂದಿ ಮರಳಿ ದೈಹಿಕ ಕ್ಷಮತೆ ಗಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಧ್ವಜದ ಸ್ಟಿಕರ್ಗಳನ್ನು ಬಿಡುಗಡೆಗೊಳಿಸಲಾಯಿತು. ಧ್ಚಜ ದಿನಾಚರಣೆ ಅಂಗವಾಗಿ 6 ಪೊಲೀಸ್ ತಂಡಗಳು ನಿಧಾನ ಹಾಗೂ ತೀವ್ರಗತಿಯ ಪಥಸಂಚಲನ ನೆಡಿಸಿದವು. ಸಶಸ್ತ್ರ ಮೀಸಲು ಪಡೆಯ ಪಿ.ಎಸ್.ಐ ಯುವರಾಜ್.ಎಸ್.ಎಸ್. ಪಥ ಸಂಚಲನದ ನೇತೃತ್ವ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸರನ್ನು ಸನ್ಮಾನಿಸಲಾಯಿತು.
ಜಿಲ್ಲಾಧಿಕಾರಿ ಟಿ.ವೆಂಕಟೇಶ್, ನಿವೃತ್ತ ಪೊಲೀಸ್ ಡಿ.ಐ.ಜಿ ಎಂ.ಎನ್.ನಾಗರಾಜ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಐಮಂಗಲ ಪೊಲೀಸ್ ತರಬೇತಿ ಕೇಂದ್ರ ಪ್ರಾಂಶುಪಾಲರ ಪಾಪಣ್ಣ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.
ಪೊಲೀಸ್ ಧ್ವಜ ಹಾಗೂ ಕಲ್ಯಾಣದಿನ ಇತಿಹಾಸ
ಪೊಲೀಸ್ ಸಿಬ್ಬಂದಿಗಳ ಕಲ್ಯಾಣ ಕಾರ್ಯಕ್ರಮ ಹಾಗೂ ಪೊಲೀಸರ ಸೇವೆ,ತ್ಯಾಗ,ಬಲಿದಾನಗಳ ಸ್ಮರಣಾರ್ಥವಾಗಿ ಪೊಲೀಸ್ ಧ್ವಜ ಹಾಗೂ ಕಲ್ಯಾಣ ದಿನಾಚರಣೆ ಆಚರಿಸಲಾಗುತ್ತದೆ. 1984ರ ಮೊದಲು ನವೆಂಬರ್ 2 ರಂದು ಪೊಲೀಸ್ ಕಲ್ಯಾಣದಿನ ಹಾಗೂ ಏಪ್ರಿಲ್ 2 ಪೊಲೀಸ್ ಧ್ವಜ ದಿನಾಚರಣೆ ಪ್ರತ್ಯೇಕವಾಗಿ ಆಚರಿಸಲಾಗುತ್ತಿತ್ತು. 1984 ರಿಂದ ಪ್ರತಿ ವರ್ಷ ಏಪ್ರಿಲ್ 2 ತಾರೀಖಿನಿಂದು ಪೊಲೀಸ್ ಧ್ವಜ ಹಾಗೂ ಪೊಲೀಸ್ ಕಲ್ಯಾಣ ದಿನಾಚರಣೆಯನ್ನು ಒಟ್ಟಾಗಿ ಆಚರಿಸಲಾಗುತ್ತದೆ.