ಬಿಜೆಪಿಗೆ ಮರ್ಮಾಘಾತ ಫಲಿತಾಂಶ ಖಚಿತ: ಬಿಎನ್ ಚಂದ್ರಪ್ಪ ಗೆಲುವು ನಿಶ್ಚಿತ

ರಾಜ್ಯ

 

ಬಿಜೆಪಿಗೆ ಮರ್ಮಘಾತ ಫಲಿತಾಂಶ ಖಚಿತ

ಬಿ .ಎನ್.ಚಂದ್ರಪ್ಪ ಗೆಲುವು ನಿಶ್ಚಿತ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತ ಇಡೀ ದೇಶಕ್ಕೆ ಮಾದರಿಯಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮರ್ಮಘಾತದ ಫಲಿತಾಂಶ ಬರಲಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ಪಟ್ಟಣದ ತರಳಬಾಳು ಬಾಲಕಿಯರ ಪ್ರೌಢಶಾಲೆಯ ಬೂತ್ ನಂಬರ್ 172 ರಲ್ಲಿ ಶುಕ್ರವಾರ ಮತ ಚಲಾಯಿಸಿದ ಬಳಿಕ ಮಾತನಾಡಿದರು.

ಕನ್ನಡ ನಾಡಿನ ಜನ ಕೃತಜ್ಞತೆ ಗುಣದವರು. ಅದರಲ್ಲೂ ಗೃಹಲಕ್ಷ್ಮಿಯರು ಪಡೆದ ಫಲಕ್ಕೆ ಪ್ರತಿಯಾಗಿ ಕೃತಜ್ಞತೆ ತೋರುವ ವಿಶಾಲ ಹೃದವಂತರು. ಯಾವುದೇ ಮತಗಟ್ಟೆ ಬಳಿ ಜಮಾಯಿಸಿರುವ ಮಹಿಳೆಯರು ನಮ್ಮ ಮತ ಸಿದ್ದರಾಮಯ್ಯ ಅವರ ಪಕ್ಷ ಕಾಂಗ್ರೆಸ್ಸಿಗೆ ಎಂದು ಹಸ್ತ ತೊರಿಸಿ ಹೇಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ ಎಂದು ತಿಳಿಸಿದರು.

 

 

 

ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಯಲ್ಲಿ ಎಲ್ಲ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಇದೆ ಎಂದು ಸಮೀಕ್ಷೆಗಳು ಹೇಳಿದ್ದು, ಇದೇ ಕಾರಣಕ್ಕೆ ಸೋಲುವ ಕ್ಷೇತ್ರದಲ್ಲಿ ಪ್ರಚಾರ ನಡೆಸಲು ಯೋಗಿ ಆದಿತ್ಯನಾಥ್ ಬರಲಿಲ್ಲ. ತುಮಕೂರಿಗೆ ಅಮತ್ ಶಾ ಕೂಡ ಬರಲೇ ಇಲ್ಲ. ಈ ಎಲ್ಲ ಬೆಳವಣಿಗೆ ಗಮನಿಸಿದರೆ ಚುನಾವಣೆಗೆ ಮುನ್ನವೇ ಬಿಜೆಪಿ ದಕ್ಷಿಣ ಭಾರತದಲ್ಲಿ ಸೋಲು ಒಪ್ಪಿಕೊಂಡಿದೆ ಎಂದರು.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹಿಜಾಬ್, ಹಲಾಲ್ ಕಟ್ ಎಂದು ಹೇಳಿ ಹೀನಾಯ ಸೋಲು ಅನುಭವಿಸಿದರು ಬುದ್ದಿ ಕಲಿಯದೇ ಲೋಕಸಭಾ ಚುನಾವಣೆಯಲ್ಲೂ ಅದೇ ದ್ವೇಷದ ಭಾವನೆ ಪ್ರಸ್ತಾಪಿಸಿದ್ದಾರೆ. ಬಸವಣ್ಣನ ನಾಡಿನ ಜನರು, ಇಂತಹ ಜಾತಿ-ಧರ್ಮದ ಮಧ್ಯೆ ವಿಷ ಬೀಜ ಬಿತ್ತುವುದನ್ನು ಸಹಿಸುವುದಿಲ್ಲ. ಈ ಕಾರಣಕ್ಕೆ ಬಿಜೆಪಿ ನಾಯಕರಿಗೆ ಈ ಭಾರೀ ಮರ್ಮಘಾತ ಫಲಿತಾಂಶವನ್ನು ಜನ ನೀಡಲಿದ್ದಾರೆ ಎಂದು ಹೇಳಿದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರ ಪರವಾಗಿ ಜಿಲ್ಲಾ ಮಂತ್ರಿ ಹಾಗೂ ಆರು ಮಂದಿ ಶಾಸಕರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗಿದೆ. ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಭಾರಿ, ದೇಶದ ಜನರ ಅಚ್ಚುಮೆಚ್ಚಿನ ನಾಯಕಿ ಪ್ರಿಯಾಂಕಾ ಗಾಂಧಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ಜೊತೆಗೆ ಬಿಜೆಪಿಯ ಸಪ್ಪೆ ಪ್ರಚಾರ, ಕಾರಜೋಳ ಅವರ ಕಾಟಾಚಾರದ ಸ್ಪರ್ಧೆ ಪರಿಣಾಮ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಎರಡೂವರೆ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ದಾಖಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಟಿಕೆಟ್‍ಗೆ 25 ಮಂದಿ ಅರ್ಜಿ ಸಲ್ಲಿಸಿದ್ದರು. ಟಿಕೆಟ್ ಘೋಷಣೆ ಬಳಿಕ ಅವರೆಲ್ಲರೂ ಪಕ್ಷದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರ ಗೆಲುವಿಗೆ ಟೊಂಕ ಕಟ್ಟಿ ನಿಂತು ಶ್ರಮಿಸಿದ್ದಾರೆ. ಸರಳ, ಸಜ್ಜನಿಕೆಯ ಚಂದ್ರಪ್ಪ ಕುರಿತು ಜಿಲ್ಲೆಯ ಜನರಲ್ಲಿ ಅಭಿಮಾನ ಇದ್ದು, ಅವರ ಗೆಲುವು ನಿಶ್ಚಿತವಾಗಿದ್ದು ಘೋಷಣೆಯಷ್ಟೇ ಬಾಕಿ ಉಳಿದಿದೆ ಎಂದು ಹೇಳಿದರು.

ಬಿಜೆಪಿ ಕುಟುಂಬದ ಮತ ಹಸ್ತಕ್ಕೆ

ರಾಜ್ಯದ ಯಾವುದೇ ಮನೆಗೆ ಎಡತಾಕಿದರು ಒಬ್ಬರಲ್ಲ ಒಬ್ಬರು ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಸಿಗುತ್ತಾರೆ. ಅಷ್ಟೇ ಏಕೆ ಬಿಜೆಪಿಯ ಬಹಳಷ್ಟು ಕಾರ್ಯಕರ್ತರು, ಮುಖಂಡರ ಮನೆಯಲ್ಲೂ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಯ ಫಲಾನುಭವಿಗಳು ಇದ್ದಾರೆ. ಅವರೆಲ್ಲರೂ ಸಿದ್ದರಾಮಯ್ಯ ಅವರನ್ನು ಬಹಳ ಅಭಿಮಾನ ಪಡುತ್ತಾರೆ. ಅವರೆಲ್ಲರೂ ಮನೆಯಲ್ಲಿನ ಗಂಡಸರಿಗೆ ಗೊತ್ತಾಗದ ರೀತಿ ಕಾಂಗ್ರೆಸ್ಸಿಗೆ ಮತ ಚಲಾಯಿಸಿದ್ದಾರೆ ಎಂದರು.

ನಾವು ಸ್ವಾಭಿಮಾನದ ಬದುಕು ನಡೆಸಲು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಕಾರಣವಾಗಿದ್ದು, ಕೇಂದ್ರದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೇ ಬಡ, ಮಧ್ಯಮ ವರ್ಗದ ಜನರ ಬದುಕು ಉತ್ತಮಗೊಳ್ಳಲಿದೆ. ಪ್ರತಿ ಕುಟುಂಬದ ಯಜಮಾನಿ ಬ್ಯಾಂಕ್ ಖಾತೆಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಸಿಗಲಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದು ನಮ್ಮ ಜವಾಬ್ದಾರಿ ಎಂದು ಗೃಹಲಕ್ಷ್ಮಿಯರ ಮಾತುಗಳು ನಮ್ಮಲ್ಲಿ ಹೆಚ್ಚು ಆತ್ಮವಿಶ್ವಾಸ ಮೂಡಿಸಿದ್ದರೆ, ಬಿಜೆಪಿಯವರಲ್ಲಿ ನಡುಕ ಉಂಟು ಮಾಡಿದೆ ಎಂದು ಎಚ್.ಆಂಜನೇಯ ಹೇಳಿದರು.

Leave a Reply

Your email address will not be published. Required fields are marked *