ಚಿತ್ರದುರ್ಗ: ನಾನು ಬಾದಮಿಯಲ್ಲಿಸೋತಿದ್ದು, ಜನರಿಂದಲ್ಲ ಅಲ್ಲ ನಮ್ಮ ಪಕ್ಷದ ನಾಯಕರೆಲ್ಲರೂ ಸೇರಿ ನನ್ನ ಸೋಲಿಸಿದರು ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಬಾದಮಿ ಸೋಲಿನ ರಹಸ್ಯ ಬಯಲು ಮಾಡಿದರು.
ಅವರು ಮಾಧ್ಯಮಗಳೊಂದಿಗೆ ಮಾತನಾಡಿ,ಕಳೆದ ಚುನಾವಣೆಯಲ್ಲಿ ಅಮಿತ್ ಶಾ ಯಡಿಯೂರಪ್ಪ ನನ್ನನ್ನು ಕರೆದು ನೀವುಗಳು ರಾಜ್ಯದಲ್ಲಿ ಸ್ಪರ್ಧಿಸಬೇಕು ಎಂದು ಹೇಳಿದ್ದರು. ಅದರಂತೆ ನಾನು ಮೊಳಕಾಲ್ಮೂರು ಹಾಗೂ ಬಾದಾಮಿಯಲ್ಲಿ ಮತ್ತು ಯಡಿಯೂರಪ್ಪ ಶಿಕಾರಿಪುರದಲ್ಲಿ ಸ್ಪರ್ಧೆ ಮಾಡಿದ್ದೇವು.ಇದರ ಜೊತೆಗೆ ದಿ. ಅನಂತ್ ಕುಮಾರ್ ಅವರು ರಾಜ್ಯಾದಾದ್ಯಂತ ತಿರುಗಲು ನನಗೆ ಹೆಲಿಕಾಪ್ಟರ್ ನೀಡಿ ಜವಾಬ್ದಾರಿ ವಹಿಸಿದ್ದರು. ಬಾದಾಮಿ ಹಾಗೂ ಮೊಳಕಾಲ್ಮೂರು ಎರಡೂ ಕಡೆ ಎರಡು ಮೂರು ದಿನಗಳ ಕಾಲ ಕೆಲಸ ಮಾಡಬೇಕಾಗಿತ್ತು. ರಾಜ್ಯದ 170 ಕ್ಷೇತ್ರಗಳಲ್ಲಿ ನಾನು ಸುತ್ತಾಟ ನಡೆಸಿದ್ದೆ, ಬಾದಾಮಿ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ 1400 ಮತಗಳಿಂದ ಸೋಲು ಅನುಭವಿಸಿದೆ. ನಾನು ಬಾದಾಮಿಯಲ್ಲಿ ಸೋತಿದ್ದು, ಜನರಿಂದ ಅಲ್ಲ ನಮ್ಮ ಪಕ್ಷದ ವ್ಯಕ್ತಿಗಳಿಂದ ನಮ್ಮ ನಾಯಕರೆಲ್ಲರೂ ಸೇರಿ ನನ್ನ ಸೋಲಿಸಿದರು. ಶ್ರೀರಾಮುಲು ಬೇಡ ಕುಲದವನು ದಲಿತ ಎಂದು ಸೋಲಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎರಡು ಕಡೆ ಮತ್ತು ಮೋದಿ ಎರಡು ಕಡೆ ನಿಂತಿದ್ದಾರೆ. ಒಬ್ಬ ಶ್ರೀರಾಮುಲು ನಾಯಕ ಜನಾಂಗದವನು ಎರಡು ಕಡೆ ನಿಂತಿದ್ದಾನೆ. ಶ್ರೀರಾಮುಲು ಎರಡು ಕಡೆ ಗೆದ್ದರೆ ನಮಗೆ ಮುಳ್ಳಾಗುತ್ತಾನೆ ಎಂದು ಸೋಲಿಸಿದರು. ಆದರೆ ನಾನು ಬಾದಾಮಿಯಲ್ಲಿ ಸೋತು ಮೊಳಕಾಲ್ಮೂರು ಕ್ಷೇತ್ರದಲ್ಲಿಯೂ ಸೋತಿದ್ದರೆ ನನ್ನ ಭವಿಷ್ಯ ಏನಾಗುತ್ತಿತ್ತು. ಈ ಕ್ಷೇತ್ರದ ಜನತೆ ನನ್ನ ಕೈ ಹಿಡಿದರು. ಇಲ್ಲದೆ ಹೋದರೆ ನನ್ನ ರಾಜಕೀಯ ಜೀವನ ಕತ್ತಲಾಗುತ್ತಿತ್ತು.ಇದನ್ನು ನಾನು ಪಕ್ಷದ ವೇದಿಕೆಯಲ್ಲಿ ಸಮಯ ನೋಡಿಕೊಂಡು ಪ್ರಶ್ನೆ ಮಾಡುತ್ತೇನೆ ಎಂದು ತಮ್ಮ ಅಸಮಧಾನ ಹೊರ ಹಾಕಿದರು.
ಸಂಯುಕ್ತವಾಣಿ