ಶ್ರೀ ಸಂತ ಸೇವಾಲಾಲ್ ಅವರ ಜನ್ಮಸ್ಥಳ ಸೂರಗೊಂಡನಕೊಪ್ಪದ ಭಾಯಾಗಡದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಶಿಬಿರಕ್ಕೆ ಅವಕಾಶ ನೀಡಬಾರದೆಂದು ಒತ್ತಾಯಿಸಿ ಚಿತ್ರದುರ್ಗ ಪತ್ರಿಕಾ ಭವನದಲ್ಲಿ ಬಂಜಾರರ ಜಾಗೃತ ಸಭೆ ನಡೆಯಿತು. ಸಂತ ಸೇವಾಲಾಲ್ ಅವರ ಜನ್ಮಸ್ಥಳ ಬಂಜಾರರ ಅಸ್ಮಿತೆಯ ಧಾರ್ಮಿಕ ಕೇಂದ್ರ. ಇದನ್ನು RSSನ ಶಿಬಿರಕ್ಕೆ ಬಳಸುವುದನ್ನು ಬಂಜಾರ ಸಮುದಾಯ ಒಕ್ಕೊರಲಿನಿಂದ ವಿರೋಧಿಸುತ್ತದೆ ಎಂದು ಹೈಕೋರ್ಟ್ ನ್ಯಾಯವಾದಿ ಎನ್ ಅನಂತನಾಯ್ಕ ಹೇಳಿದರು. RSSನ ಸಂಕುಚಿತವಾದದ ಅಪಾಯಗಳನ್ನು ಜಾಗತಿಕ ದೃಷ್ಟಿಕೋನದಲ್ಲಿ ನೋಡಬೇಕು. ತಳಸಮುದಾಯಗಳ ಯುವಜನರು ಆ ಸಂಘದಿಂದ ದೂರ ಇರಬೇಕು. ಬಂಜಾರ ಸಂಸ್ಕೃತಿ, ಪರಂಪರೆಗೆ ಸಂಘಪರಿವಾರದ ವಿಚಾರಗಳು ವಿರೋಧಿಯಾಗಿದೆ. ಬಂಜಾರ ಸಮುದಾಯದ ಅಭಿವೃದ್ಧಿ ಡಾ ಬಿ ಆರ್ ಅಂಬೇಡ್ಕರ್ ಕೊಡಮಾಡಲ್ಪಟ್ಟಿರುವ ಸಂವಿಧಾನದಿಂದ ಮಾತ್ರ ಸಾಧ್ಯ. ಬಂಜಾರರಿಗೆ ಸೇವಾಲಾಲ್, ನಾಲ್ವಡಿ ಕೃಷ್ಣರಾಜ ಒಡೆಯರ್, ಡಾ ಅಂಬೇಡ್ಕರ್ ಅವರು ಮಾರ್ಗದರ್ಶಿಗಳಾಗಬೇಕು. ಅವರ ದಾರಿಯಲ್ಲಿ ನಾವೆಲ್ಲರೂ ಸಾಗಬೇಕು. ಸಂಘಪರಿವಾದ ಕಾರ್ಯಕ್ರಮಗಳನ್ನು ಬಹಿಷ್ಕರಿಸಿ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಎಂದರು.
ಶ್ರೀ ಶ್ರೀ ಶ್ರೀ ನಂದಮಸಂದ್ ಸೇವಾಲಾಲ್ ಸ್ವಾಮೀಜಿ ಅಖಿಲ ಕರ್ನಾಟಕ ಬಂಜಾರ (ಲಂಬಾಣಿ) ಗುರುಪೀಠ, ಚಿತ್ರದುರ್ಗ ಇವರು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದರು. ಚಿಂತಕ ಡಾ ರಾಜನಾಯ್ಕ ಪ್ರಾಸ್ತವಿಕವಾಗಿ ಮಾತನಾಡಿ ಬಂಜಾರ ಇತಿಹಾಸ ಮತ್ತು ಮೂಲದ ಬಗ್ಗೆ ಮಾಹಿತಿ ನೀಡಿದರು. ಭಾಯಾಗಡ್ ಬಚಾವೊ ಅಂದೋಲದ ಪ್ರಮುಖ ರುದ್ರು ಪುನೀತ್ ಮಾತನಾಡಿದರು. ಪ್ರಕಾಶ್ ರಾಮನಾಯ್ಕ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಡಾ ಇಂದ್ರಾನಾಯ್ಕ, ವಕೀಲರಾದ ಲೋಕೇಶ್ ನಾಯ್ಕ, ಹೊಳಲ್ಕೆರೆ ವೆಂಕಟೇಶ್ ನಾಯ್ಕ, ಅನಂತಮೂರ್ತಿ ನಾಯ್ಕ, ಬಸವರಾಜ ನಾಯ್ಕ, ವಸಂತನಾಯ್ಕ, ಪುರುಷೋತ್ತಮ್ ನಾಯ್ಕ, ಮಾರುತಿ, ವೆಂಕಟೇಶ್, ಶ್ರೀನಿವಾಸ್, ಅಂಜಿ ರಾಥೋಡ್,ವಾದಿರಾಜ್, ಮಾತನಾಡಿ ಯಾವುದೇ ಕಾರಣಕ್ಕೂ ಯಾವ ಸಂಘಟನೆಗಳಿಗೂ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದೆಂದು ಒಕ್ಕೂಲರದಿಂದ ಖಂಡಿಸಿದರು. ಸೇರಿದಂತೆ ಅನೇಕರು ಪ್ರತಿನಿಧಿ ಅಧಿವೇಶನದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಚಂದ್ರನಾಯ್ಕ, ಮಾರುತಿನಾಯ್ಕ, ಸುನೀಲ್ ನಾಯ್ಕ, ವಸಂತ್, ಪ್ರವೀಣ್, ಮಂಜನಾಯ್ಕ, ಮನು, ಸುದರ್ಶನ್, ರಕ್ಷಿತ್ ಇನ್ನು ಇತರರು ಉಪಸ್ಥಿತರಿದ್ದರು.
ನಿರ್ಣಯಗಳು:
ಬಾಯಾಗಡ್ ಕ್ಷೇತ್ರದಲ್ಲಿ ಸೇವಾಲಾಲ್ -ಮರಿಯಮ್ಮಾ ಅವರ ಬಿಳಿಕೆಂಪು ಧ್ವಜ ಮತ್ತು ನಮ್ಮ ರಾಷ್ಟ್ರೀಯ ಧ್ವಜ ಮಾತ್ರ ಹಾರಾಡಬೇಕು. ಇನ್ಯಾವುದೇ ಧ್ವಜ ಹಾರಾಟಕ್ಕೆ ಅವಕಾಶ ಇರಬಾರದು.
ಮಹಾಮಠ ಸಮಿತಿಯ ಪರವಾನಿಗೆ ಇಲ್ಲದೇ ಕರಪತ್ರ ಮುದ್ರಿಸಿ ಪ್ರಚಾರ ಮಾಡಿದ ತಪ್ಪಿಗಾಗಿ RSS ಬಂಜಾರ ಸಮುದಾಯದ ಕ್ಷಮೆ ಯಾಚಿಸಬೇಕು. ಶಿಬಿರ ನಡೆಸಲು ಅವಕಾಶ ಕೋರಿ RSS ನೀಡಿರುವ ಪತ್ರವನ್ನು ಮಹಾಮಠ ಸಮಿತಿ ತಿರಸ್ಕರಿಸಬೇಕು.
ಸಂತ ಸೇವಾಲಾಲ್ ಅವರ ಜನ್ಮಸ್ಥಳ ಭಾಯಾಗಡವನ್ನು ಪಕ್ಷ ರಾಜಕೀಯದಿಂದ ಮುಕ್ತಗೊಳಿಸಬೇಕು. ರಾಜಕೀಯ ಪಕ್ಷಗಳ ಮುಖಂಡರು ಅಲ್ಲಿಗೆ ಕೇವಲ ಭಕ್ತರಾಗಿ ಆಗಮಿಸಿ ಪ್ರಾರ್ಥನೆ ಮತ್ತು ಸೇವೆ ಸಲ್ಲಿಸಿ ಹೋಗುವಂತೆ ನಿಯಮ ರೂಪಿಸಬೇಕು.
ಇದೇ ಸೆಪ್ಟೆಂಬರ್ 10 ಮತ್ತು11 ರಂದು ಭಾಯಾಗಡದಲ್ಲಿ ಬಂಜಾರ ಧರ್ಮ ಜಾಗೃತಿ ಸಭೆ ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲೆಯ ಪ್ರತಿನಿಧಿಗಳು ಭಾಗವಹಿಸುತ್ತೇವೆ ಎಂದು ಸಮಾಜದ ಮುಖಂಡ ಪ್ರಕಾಶ್ ರಮಾನಾಯ್ಕ್ ಹೇಳಿದರು.