ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಶಾಸಕ ಪಪ್ಪಿ ಸ್ವಚ್ಚತೆ ಆದ್ಯತೆ ನೀಡುವಂತೆ ಸೂಚನೆ
ನೂತನವಾಗಿ ಆಯ್ಕೆಯಾಗಿರುವ ಕೆಲವು ಶಾಸಕರು ಸಚಿವ ಸ್ಥಾನದ ಲಾಬಿಗಾಗಿ ಕಸರತ್ತು ನಡೆಸುತ್ತಿದ್ರೆ ಚಿತ್ರದುರ್ಗದ ಶಾಸಕ ಪಪ್ಪಿ ಜನಸೇವೆ ಯೇ ನನ್ನ ಗುರಿ ಎಂದು ಕೊಂಡು ಕ್ಷೇತ್ರದಲ್ಲಿ ಸುತ್ತಾಟ ನಡೆಸಿ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಆಯ್ಕೆ ಚರ್ಚೆ ಜೋರಾಗಿದ್ದು, ಇತ್ತ ಕೋಟೆ ನಾಡು ಚಿತ್ರದುರ್ಗದ ನೂತನ ಶಾಸಕರೊಬ್ಬರು, ಆಯ್ಕೆಗೊಂಡ ಮೂರು ದಿನಗಳ ಬೆನ್ನಲ್ಲೇ ದಿಡೀರ್ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೌದು ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರು ನಗರದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಚಿತ್ರಣವನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ.
ಆಸ್ಪತ್ರೆಯ ಏಡ್ಸ್ ಚಿಕಿತ್ಸಾ ವಿಭಾಗ, ಹೆರಿಗೆ ವಿಭಾಗ, ಅಪರೇಷನ್ ವಿಭಾಗ ಸೇರಿದಂತೆ ವಿವಿಧ ವಾರ್ಡ್ ಗಳಿಗೆ ಭೇಟಿ ನೀಡಿದರು.
ಯಾವ ಯಾವ ವಿಭಾಗದಲ್ಲಿ ಎಷ್ಟೆಷ್ಟು ರೋಗಿಗಳಿದ್ದಾರೆ ಎಂಬುದನ್ನು ತಿಳಿದುಕೊಂಡು, ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಉತ್ತಮ ಚಿಕಿತ್ಸೆ ನೀಡಲು ಸೂಚಿಸಿದರು. ಇದಲ್ಲದೆ
ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಮತ್ತು ಡಾಕ್ಟರ್ ಗಳು ಹೇಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬುದನ್ನು ಡಾಕ್ಟರ್ ಕಡೆಯಿಂದ ಮಾಹಿತಿ ಪಡೆದುಕೊಂಡರು.
ಇದಲ್ಲದೆ ಆಸ್ಪತ್ರೆಯ ಶೌಚಾಲಯ ಕೊಠಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡುವಂತೆ ಆಸ್ಪತ್ರೆ ಸಿಬ್ಬಂದಿಗೆ ತಿಳಿಸಿದರು.
ನಂತರ ವಾರ್ಡ್ ಗಳಲ್ಲಿನ ರೋಗಿಗಳ ಬಳಿ ಹೋಗಿ ಆರೋಗ್ಯವನ್ನು ವಿಚಾರಿಸಿದ್ದಾರೆ. ಸೂಕ್ತ ಸಮಯದಲ್ಲಿ ನಿಮಗೆ ಚಿಕಿತ್ಸೆ ಸಿಗುತ್ತದೆ ಹೇಗೆ ಎಂದು ರೋಗಿಗಳ ಜೊತೆ ಚರ್ಚಿಸಿದರು.
ಇತ್ತೀಚೆಗಷ್ಟೇ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೆಸಿ ವೀರೇಂದ್ರ ಪಪ್ಪಿ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಜಿಹೆಚ್ ತಿಪ್ಪಾರೆಡ್ಡಿ ಅವರ ವಿರುದ್ಧ ಸುಮಾರು 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದ ಪಪ್ಪಿ ಈ ಬಾರಿ ಕಾಂಗ್ರೆಸ್ ನಿಂದ ಜಯಗಳಿಸಿದ್ದಾರೆ.